Tuesday, August 26, 2014

ಚೌತಿ ಹಬ್ಬಕ್ಕೆ ಹೂ ಕೊಯ್ಯಲು ಹೋದ ಸಂದರ್ಭ

ಹೊವ್ದು ಆಗೆಲ್ಲ ಪೇಟೆಯಿಂದ ಹೂ ತೆಕಂಡ್ ಬಂದ್ರೆ ಖರ್ಚು ಜಾಸ್ತಿ ಹೇಳಿ ಮನೆಯವೆಲ್ಲ ಸೇರಿ ಬೆಟ್ಟಕ್ಕೆ ಹೋಗಿ ಕೋಟೆ ಹೂ ಕೊಯ್ದು ಬರ್ತಿದ್ವಿ. ಮನೆಯ ಹೂ ಕೊಯ್ಯುವ ಜವಾಬ್ದಾರಿ ಸಣ್ಣ ಮಕ್ಕಳಿಗೆ, ಬೆಟ್ಟಕ್ಕೆ ಹೋಗಿ ಹೂ ತರುವ ಜವಾಬ್ದಾರಿ ದೊಡ್ಡವರಿಗೆ.

ನಮ್ಮ ಮನೆಯಲ್ಲಿ ಗಣಪತಿ ಕೂರಿಸ್ತಿರಲಿಲ್ಲ.. ಹಾಗಾಗಿ ನಾವೆಲ್ಲ ಚೌತಿಗೆ ಒಂದು ದಿನ ಮೊದಲೇ ಅಜ್ಜನ ಮನೆ ಸೆರ್ಕೊಳ್ತಿದ್ವಿ. ಹಿಂದಿನ ದಿನ ಫಲಾವಳಿ ಕಟ್ಟುವ ಕಾರ್ಯಕ್ರಮ.. ಯಾವ ಹಣ್ಣು ಕೆಳಗೆ ಕುಳಿತ ಭಟ್ಟರ ಮೇಲೆ ಬೀಳದಂತೆ ಕಟ್ಟಬೇಕು. ಟೊಮೆಟೋ ಕಟ್ಟುದೆ ಒಂದು ಸವಾಲಾಗಿತ್ತು. ಬೆಳಗಿನ ಜಾವ  ಗಂಟೆಗೆ ಯೆದ್ದು ಬೆಟ್ಟಕ್ಕೆ ಹೋಗುದು.. ಅಲ್ಲಿ ಗೇರು ಮರ ಅಲ್ಲಿ ಇಲ್ಲಿ ಹಬ್ಬಿಕೊಂಡಿದ್ದ ಕೋಟೆ ಬಳ್ಳಿಯಿಂದ ಹೂ ಕೊಯ್ದು ತರುವುದೆ ಒಂದು ಮಜಾ ಕೊಡ್ತಿತ್ತು. ಅಡವಾಗಿ ಹೋದ್ರೆ ಬೆರೆಯವು ಬಂದು ಕೊಯ್ದು ಹೋಗ್ತಿದ್ರು.  ಕಡಿಮೆ ಕಡಿಮೆ ಅಂದ್ರು ೪-೫ ಕೈಚೀಲ ತರಕ್ಕಾಗಿತ್ತು.  ಹೂ ತಂದು ಆಮೆಲೆ ಗಣಪತಿ ತರುವುದು ನಮ್ಮ ಕೆಲಸ.. ಗಣಪತಿ ಯೆಲ್ಲ ಪ್ರತಿಷ್ಟಾಪನೆ ಆದಮೆಲೆ ತಂದ ಹೂವನ್ನ  ಹಾರ ಮಾಡಿ ಗಣಪತಿ ಮುಂದೆ ಆ ಕಡೆ ೩ ಈ ಕಡೆ ೩ ಹಾರ ಹಾಕುದು..

ಹೀಗೆ ಒಂದು ಸಲ ಬೆಳಿಗ್ಗೆ ನಮ್ಮ ಗಡಿಯಾರ , ಅದೇ ಹಳೆಕಾಲದ ಕೀ ಕೊಡು ಗಡಿಯಾರ ಬಡ್ಕಂದ್ ಕೂಡ್ಲೆ ಯೆದ್ದು ತಯ್ಯರಾಗಿ ನಿನ್ನೆ ಇಟ್ಟಿದ್ದ ಕೈಚೀಲ ಕೊಕ್ಕೆ ಯೆಲ್ಲ ತೆಕಂಡು ಬೆಟ್ಟ ಹತ್ತಿ ಒಂದು ಕಡೆ ಕುಂತಿದ್ದೊ.. ಸ್ವಲ್ಪನಾದ್ರು ಬೆಳಕಾಗ್ಲಿ ಇಲ್ಲಂದ್ರೆ ಹೂ ಕಾಣಬೇಕಲ್ಲ.. ಕಾದಿದ್ದೆ ಕಾದಿದ್ದು.. ಸುಮಾರು ೨-೩ ಗಂಟೆ ಕಾದಿದ್ದು.. ಆಮೇಲೆ ಸ್ವಲ್ಪ ಬೆಳಗಾಯ್ತು.. ಅದ್ಯಾಕೆ ಹೀಗೆ ಅಂತ ತಿಳಿಲಿಲ್ಲ.. ಸರಿ ಹೂ ಕೊಯ್ದು ಬಂದು ಮನೆಯಲ್ಲಿ ಗಡಿಯಾರ ನೋಡಿದ್ರೆ ಯಾರೊ ಕಿಡಿಗೇಡಿಗಳು ಅಲಾರ್ಮ್ ೩ ಗಂಟೆಗೆ ತಿರುಗಿಸಿ ಇಟ್ಟಿಕ್ಕಿದ್ದೊ.. ಕೇಳಿದ್ರೆ ನಾನಲ್ಲ ನಾನಲ್ಲ..

ಚೌತಿ ಹಬ್ಬ ಬಂದಾಗಲೆಲ್ಲ ಇದು ಯಾಕೊ ನೆನಪಾಗುತ್ತದೆ..


Sunday, February 26, 2012

ಇದು ಯಾರು ಬರೆದ ಕಥೆಯೋ ?

"ಪೂಜಾಕಾಲೆ ಸ್ವರ ವರ್ಣ ಮಂತ್ರ ತಂತ್ರ ದೋಷ ಪರಿಹಾರರ್ಥಂ ಪ್ರಾಯಶ್ಚಿತ್ತಾರ್ತಂ ಕರಿಷ್ಯೇ" ಅಂತ ದೇವರ ಮೇಲೆ ಒಂದು ಹೂವು ಹಾಕಿ ಆಚಮನ ಮಾಡಿ ಎದ್ದರು ರಾಂಭಟ್ರು.. ಗಂಭೀರ ವದನ, ಸುಮಾರು ೩೨ ವರ್ಷದ ಧೃಢಕಾಯದವರು, ಸುಬ್ಬಣ್ಣನ ಮನೆಯ ಸತ್ಯನಾರಾಯಣ ಪೂಜೆಗೆ ಹೊರಡಲು ತಯಾರಾದರು..
"ಅಬ್ಬೆ ಆಸ್ರಿಗೆ ಆತನೇ, ಎಂತ ಮಾಡಿದ್ಯೇ? "
" ಆತೋ ಮಾರೆಯ ಆತು.. ಅವತ್ತು ಸತ್ಯನಾರಾಯಣ ಪೂಜೆ ಅಲ್ದಾ, ಅವಲಕ್ಕಿ ಮಜ್ಜಿಗೆ ತಿನ್ಡ್ಕಂಡು ಹೋಗು.. ಮುಸುರೆ ಎಂತದೂ ಮಾಡಿದ್ನಿಲ್ಲೇ, ಯಾವಾಗೂ ನಾನೇ ಮಾಡಿ ಸಾಯವು.. ನನ್ನ ಹಣೆಬಾರನೆ ಇದು ಆಗೋತು " ಸ್ವಲ್ಪ ಜೋರಾಗೆ ಹೇಳಿದರು ತಾಯಿ. ಯಾಕೋ ಅಬ್ಬೆಗೆ ಸ್ವಲ್ಪ ಸಿಟ್ಟು ಬಂದಾಗೆ ಇದ್ದು ಹೇಳಿ ರಾಂ ಭಟ್ರು ಸುಮ್ಮನೆ ಸ್ವಲ್ಪ ಅವಲಕ್ಕಿ ಅದಕ್ಕೆ ಮಜ್ಜಿಗೆ ಹಾಕಿ ತಿನ್ನಲು ಅಡುಗೆ ಮನೆಗೆ ಹೋದರು..
ಅಡುಗೆ ಮನೆಯಲ್ಲಿ ಅಬ್ಬೆ ಒಬ್ಬಳೇ ಪಾತ್ರೆ ತೊಳೆಯುತ್ತಿದ್ದಳು.. ಬೆಳಕು ಸರಿಯಾಗಿ ಇರಲಿಲ್ಲ.. ಹಳೆ ಕಾಲದ ಮನೆ.. ಮುಖ ಗೋಡೆಯ ಕಡೆಗೆ ಇತ್ತು.. ಪಾಪ ಅದೇ ಕಟ್ಟೆ ಇರುವ ಜಾಗದಲ್ಲಿ ಪಾತ್ರೆ ಶಬ್ದ ಮಾಡುತ್ತಾ ಮಗನ ಬಂದಿದ್ದು ಗೊತ್ತಾದರೂ ಆ ಕಡೆ ಗಮನಿಸದಂತೆ ಏನೋ ಗೊಣಗುತ್ತಿದ್ದಳು.. ರಾಂಭಟ್ಟ ಇನ್ನೇನು ಅಲ್ಲೇ ತಗಡಿನ ಡಬ್ಬಿಯಲ್ಲಿ ಇದ್ದ ಅವಲಕ್ಕಿಯನ್ನ ಒಂದು ಪಾತ್ರೆಯಲ್ಲಿ ಹಾಕಿಕೊಂಡು ತೊಳೆದು ಕೊಳ್ಳಲು ಹೋದಾಗ ಅಬ್ಬೆಯನ್ನು ನೋಡಿ ವಿಷ್ಯ ಸ್ವಲ್ಪ ಅರ್ಥ ಆಯ್ತು..
" ಎಂತದೆ ಅಬ್ಬೆ ಅದು ದಿನಾ ಕರ್ಖರೆ ನಿಂದು, ನಾ ಎಂತ ಮಾಡವೆ ಈಗ, ಅಪ್ಪ ಮೊದಲಿಗೆ ನನ್ನ ಹಾಯ್ ಸ್ಕೂಲ್ ಮುಗಿದ ಮೇಲೆ ಕಾಲೇಜ್ ಗೆ ಕಳ್ಸಿದ್ರೆ ನಾನು ಏನೋ ಅಲ್ಪ ಸ್ವಲ್ಪ ಓದಿ ಒಳ್ಳೆ ಕೆಲ್ಸಕ್ಕೆ ಸೇರ್ಕತ್ತಿದ್ದೆ.. "
"ಹೌದ, ಆಗ ನಮ್ಮ ಪರಿಸ್ತಿತಿ ಹಂಗೆ ಇತ್ತು.. ಆ ಸುಬ್ಬಣ್ಣ ನಿಂಗೆ ಮಂತ್ರ ಹೇಳೇ ಕೊಟ್ಟದ್ದಕ್ಕೆ ನಿನ್ನ ಜೀವನಕ್ಕೆ ಒಂದು ಹಾದಿ ಆತು.. ಏನೋ ಸಣ್ಣ ತೋಟ ನೋಡ್ಕಂಡು ಇದ್ದೆ.  ಎಂಟು ದಿನ ಹೇಳಿ ಹಿಂಗೆ ಇರತ್ಯ? "
" ನಾನಾದರೂ ಎಂತ ಮಾಡುದೇ.?"
"ತಮ್ಮ ಹಂಗಾರೆ ಆ ಸುಬ್ಬಣ್ಣ ೪ ಜಾತಕ ಕಳ್ಸಿದ್ದ.. ಒಂದು ಜಾತಕ ಆಗ್ತು ಹೇಳಿದ್ದ "
" ಒವೆಲ್ಲ ಮನೇಲಿ ಇಪ್ಪ್ರೋವ್ರನ್ನ ಮದುವೆ ಆಗ್ತ್ವಿಲ್ಯೇ.. "
"ಅಲ್ದೋ ಒಂದು ಸಲ ಹೋಗಿ ಕೇಳ್ಕಂಡು ಬಾರಾ" 
"ಇಲ್ಲಿವರೆಗೆ ಎಷ್ಟು ಆತೆ? ನಂಗೂ ಹೋಗಿ ಹೋಗಿ ಸಾಕಾಗೋತು, ಎಲ್ಲೂ  ಹೆಣ್ಣು ನೋಡು ವರೆಗೇ ಬತ್ತಿಲ್ಲೆ. ಊರಲ್ಲಿ ಅಂದ ಕೂಡ್ಲೇ ಬೇಡ ಹೇಳ್ತೋ..ಇನ್ನು ಏನೋ ನಮ್ಮ ಆಸ್ತಿ ಇದ್ದು ಅಂದ್ರೆ, ಬಟ್ರು, ಮಡಿ ಮೈಲಿಗೆ ಜಾಸ್ತಿ, ಅತ್ತೆಬೇರೆ ಇದ್ದು. ಹೇಳ್ತೋ..ನಾವು ಮಾಡುವ ಉದ್ಯೋಗನೆ ನಮಗೆ ಕಂಟಕ"
"ಅಲ್ದೋ ಮಾಣಿ ನಿಂಗೆ ಮದುವೆ ಆಗವು ಅಂದ್ರೆ ನಾ ಇದ್ದದ್ದು ತಪ್ಪನ..? ಅವೆಲ್ಲ ಹಾಂಗೆ ಉದ್ಭವ ಅದವ? "
" ಎಲ್ಲ ಹಂಗೆಯೇ ಅಬ್ಬೆ ,, ನಮ್ಮಲ್ಲಿ ಗಂಡು ಮಕ್ಕೋ ಜಾಸ್ತಿ ಇದ್ದೋ.. ಹಣ್ಣು ಮಕ್ಕೋ ಕಡಿಮೆ ಆಜೋ.. ಎಲ್ಲರಿಗೂ ಸುಖದ ಜೀವನ ಬೇಕು ನೋಡು..ಮೈ ಬಗ್ಗಿಸಿ ದುಡಿಯುಲೇ ಆಗ್ತಿಲ್ಲೆ, ಅತ್ತೆ ಮಾವನ ಕಾಟ ಇಪ್ಪುಲೇ ಇಲ್ಲೇ.. ಅಲ್ದೆ, ಪಿ ಯು ಸಿ ಮಾಡಿದ ಹುಡ್ಗಿರು, ಇಂಜಿನಿಯರ್ ಆದೊವೆ ಬೇಕು ಹೇಳ್ತಾ.. ಅಂದ್ರೆ ನೀನೆ ಯೆಚನೆ ಮಾಡೇ.. ಇನ್ನು ನಮ್ಮಂತ ಭಟ್ಟನ ಯಾರು ಮದುವೆ ಆಗ್ತ್ವೆ? ಈಗೆಲ್ಲ ಬೇರೆ ವಿದೇಶದಲ್ಲಿ ಇದ್ದವೆ ಬೇಕು ಹೇಳುಲೇ ಶುರು ಮಾಡಿದ್ದೋ.. "
" ತಮ್ಮ ಹಂಗಾರೆ ಯಾವಾಗೋ ನೀನು  ಸಂಸಾರ ಹೇಳಿ ಮಾಡುದು..? ನಾ ಮೊಮ್ಮಕ್ಕಳನ್ನ ಅಡಸುದು..?"
" ಆ ಭಗವಂತ ಎಲ್ಲಿ ಹೆಂಡತಿ ಸೃಷ್ಟಿ ಮಾಡಿದನೋ ಗುತ್ತಿಲ್ಲೇ.. ಈಗೆಲ್ಲ ನಮ್ಮ ಜಾತಿ ಹೇಳಿ ಕುತ್ಕಂದ್ರೆ ಆಗ್ತಿಲ್ಲೆ..ಮೊನ್ನೆ ಆ ಕುಪ್ಪಣ್ಣ ಅದ್ಯಾವುದೋ ಲಿಂಗಾಯಿತ ಹುಡುಗಿ ತಂದಕಂಡು ಮದುವೆ ಆಜ್ನಿಲ್ಯ?
"ಹೌದು ನಂಗೂ ಗುತ್ತಾತು, ಶುಶೀಲ ಹೇಳ್ತಿತ್ತು..ಎಂತ ಅವನೇ ದುಡ್ಡು ಕೊಟ್ಟಿದ್ನದ..ಹೌದನ? "
"ಆದಿಕ್ಕು..ಮತ್ತೆ ಎಂತ ಮಾಡ್ತವೆ..? ಹುಡುಗಿ ನೋಡುಲೆ ಬ್ರಾಹ್ಮಣರ ಜಾತಿ ತರಹನೂ ಕಾಂತಿಲ್ಯೇ..ಗಂಡಿಗೆ ಒಂದು ಹೆಣ್ಣು ಅಷ್ಟೇ.."
"ಎಂತ ಕಾಲ ಬಂತೋ ಮಾರೆಯ"
"ಎಂತದೂ ಇಲ್ಲೇ ನಾನೂ ಇನ್ನು ೪ ಕಡೆ ನೋಡ್ತೆ ಕಡೆಗೆ ನಮಗೂ ಅದೇ ಗತಿ.."
"ನೋಡವನ ತಮ್ಮ ದೇವರಿದ್ದ.. ನೀ ಅವಲಕ್ಕಿ ಮಜ್ಜಿಗೆ ತಿನ್ಡ್ಕಂಡು ಹೊರಡು.. ಎಂತ ಮಾಡುಲೂ ಬತ್ತಿಲೆ.. ಹರೇ ರಾಮ ಹರೆ ರಾಮ, ಎಲ್ಲ ನೀನೆ ದಾರಿ ತೋರ್ಸವು.."

ಇದು ಬರಿ ರಾಮ್ ಭಟ್ಟರ ಕಥೆಯಲ್ಲ.. ಈಗಿನ ಕಾಲದ ಹವ್ಯಕರ ಮನೆಯಲ್ಲಿ ನಡೆಯುವ ನಿತ್ಯ ಕಥೆ.. ಇದಕ್ಕೆ ಪರಿಹಾರ ಏನು?

Friday, February 17, 2012

ಆ ಎರಡು ಹೆಜ್ಜೆಗಳು

ಸೋಮೆರು ಎಂಬ ಒಬ್ಬ ರೈತನಿದ್ದ.. ಆತ ದೈವಭಕ್ತನಾಗಿದ್ದ.. ತನ್ನ ಪ್ರತಿಯೊಂದು ಕೆಲಸದಲ್ಲೂ  ದೇವರನ್ನ ಕಾಣುತ್ತಿದ್ದ.. ಹೆಂಡತಿ ಮಕ್ಕಳೊಂದಿಗೆ ವ್ಯವಸಾಯದಲ್ಲಿ ತೊಡಗಿದ್ದ..
ಪ್ರತಿನಿತ್ಯ ಬೆಳಿಗ್ಗೆ ನದಿಯಲ್ಲಿ ಸ್ನಾನಮಾಡಿ ಅಲ್ಲೇ ಮರಳಿನಲ್ಲಿ ಇಷ್ಟ ದೇವರನ್ನ ಮಾಡಿ   ಪೂಜಿಸುತ್ತಿದ್ದ. ಇದು ತುಂಬಾ ವರ್ಷದಿಂದ ನಡೆಸಿಕೊಂಡು ಬಂದಿದ್ದ.. ಇತ್ತೀಚಿಗೆ ಪೂಜೆ ಮುಗಿಸಿ ಮನೆಗೆ ಹೊರಡುವಾಗ, ಅಕಸ್ಮಾತ್ತಾಗಿ ಹಿಂದೆ ನೋಡಿದ.. ಅಲ್ಲೊಂದು ಆಶ್ಚರ್ಯ ಕಾದಿತ್ತು.. ಈತನ ಹೆಜ್ಜೆ ಜೊತೆ ಇನ್ನೆರಡು ಹೆಜ್ಜೆಗಳು ಕಂಡವು.. ಸೋಮೆರುಗೆ ಇದು ಯಾರ  ಹೆಜ್ಜೆ ಅಂತ  ಅರ್ಥವಾಗಲಿಲ್ಲ.. ಅದೇ ಯೋಚನೆಯಲ್ಲೇ ಮನೆಗೆ ಬಂದು ಒಂದು ಮರದ ಕೆಳಗೆ ಕುಳಿತ.. ಹಾಗೆಯೇ ಗಾಢ ನಿದ್ರೆ ಬಂತು.. ನಿತ್ಯ ಪೂಜೆ ಮಾಡುತ್ತಿದ್ದ ಇಷ್ಟ ದೇವರು ಕಾಣಿಸಿಕೊಂಡ ..ಆಗ ಸೇಮೆರು ಈವತ್ತು ನೋಡಿದ ಆಶ್ಚರ್ಯ ಹೇಳಿದ.. ಆದಕ್ಕೆ " ಕಂದ, ನೀನು ನೋಡಿ ಇನ್ನೆರಡು ಹೆಜ್ಜೆಗಳು ನನ್ನವೇ, ನಾನು ಯಾವಾಗಲೂ ನಿನ್ನ  ಜೊತೆಗಿರುತ್ತೇನೆ."  ಅಂದ  . ಸುಮೆರುಗೆ ಅತ್ಯಂತ ಸಂತೋಷವೂ ಸಮಾಧಾನವೂ ಆಯಿತು. 
ಸ್ವಲ್ಪ ಸಮಯದ ನಂತರ ಹೆಂಡತಿ ಮಕ್ಕಳಿಗೆ ಯಾವುದೋ ಒಂದು ಖಾಯಿಲೆ ಬಂದು ಸುಮೆರುವಿನ ಸ್ತಿತಿ ಚಿಂತಾಜನಕವಾಯಿತು .. ಪ್ರತಿನಿತ್ಯ ದೇವರನ್ನ ಬೇಡಿಕೊಳ್ಳಲಾರಮ್ಭಿಸಿದ .. ಆಗ ಅವನಿಗೆ ದೇವರ ಮೇಲೆ ಅನುಮಾನ ಶುರುವಾಯ್ತು.. ಯಾಕೆ ದೇವರು ನನ್ನನ್ನ ನೋಡುತ್ತ್ತಿಲ್ಲ ಅನ್ನಿಸತೊಡಗಿತು.. ಹಾಗೆ ಮನೆಗೆ ಬರುವಾಗ ಹಿಂದೆ ದೇವರ ಹೆಜ್ಜೆ ಇದೆಯೇ ಅಂತ ಗಮನಿಸಿದ.. ಬರಿ ಇವನ ಹೆಜ್ಜೆ ಮಾತ್ರ ಕಾಣಿಸತೊಡಗಿತು.. ದೇವರ ಮೇಲೆ ಅತೀವ ಸಿಟ್ಟು ಬಂತು. "ನಾನು ನಿನ್ನನ್ನೇ ನಂಬಿದ್ದೇನೆ, ಆಗ ಸುಖವಾಗಿದ್ದೆ,  ಆಗ ನೀನು ನನ್ನ ಜೊತೆಗಿದ್ದೆ, ಈಗ ಕಷ್ಟದಲ್ಲಿರುವಾಗ ಎಲ್ಲಿಗೆ ಹೋದೆ..? ಇದು ನ್ಯಾಯನ " ಅಂತ ಗೋಗರೆಯತೊಡಗಿದ.. ಹಾಗೆ ಬಂದು ಮರದಕೆಳಗೆ ಕುಳಿತ.. ಗಾಢ ನಿದ್ರೆ.. ಆಗ ದೇವರು ಕಾಣಿಸಿಕೊಂಡ .. "ಏನು ಸ್ವಾಮಿ ಇದು ಸರಿನ..? ನಿನ್ನ ಹೆಜ್ಜೆಗಳೇ ಕಾಣಿಸುತ್ತಿಲ್ಲ.. ಈಗ ನಾನು ಕಷ್ಟದಲ್ಲಿದ್ದೇನೆ.. ನೀನು ಹೀಗೆ ನನ್ನನ್ನ ಮರೆಯಬಹುದ? " ಆಗ ದೇವರು " ಕಂದ, ಸಿಟ್ಟಾಗಬೇಡ, ಈಗ ನೀನು ನೋಡುತ್ತಿರುವ ಹೆಜ್ಜೆಗಳು ನಿನ್ನದಲ್ಲ, ಅವು ನನ್ನವೇ, ನಿನಗಿರುವ ಕಷ್ಟದಲ್ಲಿ ನೀನು ನಡೆಯಲೂ ಅಸಾಧ್ಯ ಅಂತ ನಿನ್ನನ್ನ ನನ್ನ ಹೆಗಲಮೇಲೆ ಹೊತ್ತುಕೊಂಡಿದ್ದೇನೆ. ಕಷ್ಟ ಯಾವಾಗಲೂ ಶಾಶ್ವತ ಅಲ್ಲ ಮಗು, ಕಳೆದ ಮೇಲೆ ಪುನಃ ಮೊದಲಿನಂತೆ ನಾನು ನಿನ್ನ ಜೊತೆಗಿರುತ್ತೇನೆ"
ಸುಮೆರುವಿಗೆ ಏನು ಹೇಳಬೋಕೋ ತಿಳಿಯಲಿಲ್ಲ..
 

Monday, February 13, 2012

ಭಾಗ್ಯದ ಲಕ್ಷ್ಮಿ ಬಾರಮ್ಮ

"ಭಾಗ್ಯದ  ಲಕ್ಷ್ಮಿ ಬಾರಮ್ಮ, ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮ...." 

ಹೀಗೆ ಗೀತೆ ರಚಿಸಿ, ಹಾಡಿದರು ಪುರಂದರ ದಾಸರು . ಅದನ್ನ ನಮ್ಮ ಭಾರತರತ್ನ ಪಂಡಿತ್ ಭೀಮಸೇನ್ ಜೋಷಿ ಯವರ ಕಂಚಿನ ಕಂಠದಲ್ಲಿ ಜನ ಮನ ಮುಟ್ಟುವಂತೆ ಮನೋಜ್ಞವಾಗಿ ಹಾಡಿದರು..   
ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಸೌಭಾಗ್ಯ ಲಕ್ಷ್ಮಿ , ಸಂತಾನ ಲಕ್ಷ್ಮಿ, ಹೀಗೆ ಹಲವಾರು ವಿಧದಿಂದ ನಾ ಆ ಲಕ್ಷ್ಮಿ ದೇವಿಯನ್ನ ಹಾಡಿ ಹೊಗಳುತ್ತಿದ್ದೇವೆ... ಹೇಗಾದರೂ ಮಾಡಿ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುವ  ಬಯಕೆಯಿಂದ ಮಾಡಬಾರದ ಕೆಲಸಕ್ಕೂ  ಕೈ ಹಾಕುತ್ತಾರೆ.. ಅದು ನ್ಯಾಯಸಂಮ್ಮತವೋ ಅಂತಲೂ ಯೋಚಿಸುವ ಗೋಜಿಗೆ ಹೋಗುವುದಿಲ್ಲ..ಅದೇನೇ ಇರಲಿ..ಬೇಡಿದವರಿಗೆ ಅಥವಾ ಪೂಜಿಸಿದವರಿಗೆ ಮಾತ್ರ ಆಕೆ ಧನ, ಕನಕ ಕರುಣಿಸುವುದಾದರೆ ಆಕೆ ಅವ್ರ ದಾಸಿಯಗಿರುತ್ತಿದ್ದಳೇನೋ..!  ಪೂಜಿಸದವರು ಉಪವಾಸ ಇರಬೇಕಾಗುತ್ತಿತ್ತೇನೋ..! ಮಾತೆಯ ದೃಷ್ಟಿಯಲ್ಲಿ  ಎಲ್ಲ ಮಕ್ಕಳೂ ಒಂದೇ.. ಎಲ್ಲರೂ ಸಮಾನರು.. 
ಎಂದಿನಂತೆ ಅಂದೂ ಕೂಡ ಬೆಳಿಗ್ಗೆ ಎದ್ದು "ಕರಾಗ್ರೆ ವಸತೇ ಲಕ್ಸ್ಮಿಕರಮಧ್ಯೇ ಸರಸ್ವತಿ ಕರಮೂಲೇ ಸ್ಥಿತೇ ಗೌರಿ ಪ್ರಭಾತೆ ಕರ ದರ್ಶನಂ" ಅಂತ ದೇವಿ ಸ್ತುತಿ ಮಾಡಿ " ಏನ್ ರಗೆಲೆ ಮಗಳಿಂದು  ಅಂತ ಗೊಣಗುತ್ತ  ನಿತ್ಯ ಕರ್ಮಗಳನ್ನ ಮುಗಿಸಿ ವಾಕಿಂಗ್ ಗೆ ಹೊರಡಲು ಅನುವಾದೆ.. 
"ರೀ ಇಂದು ಹಾಲು ತಗೊಂಡು ಬರಲ್ವ?" ಅಂತ ನನ್ನ ಶ್ರೀಮತಿ ಕೂಗಿ ದಿನದ ಕರ್ತವ್ಯವನ್ನ ನೆನಪಿಸಿದಾಗ  "ಇವಳಿಗೆ ಇದು ಈಗಲೇ ನೆನಪಾಗಬೇಕೆ" ಅಂದುಕೊಳ್ಳುತ್ತ, ಜೋಬಲ್ಲಿ ೫೦ ರು ಹಿಡಿದು ಹೊರಟೆ.  ಅಲ್ಲಿ ಹೋಗಿ ೨ ಲಿಟರ್ ಹಾಲು ಕೊಡಿ ಅಂದಾಗ ಅವನು ಹಾಲು ಕೊಟ್ಟು ೨ ರು ವಾಪಸ್ ಕೊಟ್ಟ . "ಇದೇನಯ್ಯ, ನಿನ್ನೆ ೮ ರು ವಾಪಸ್ ಕೊಟ್ಟಿದ್ದೆ, ಇವತ್ತೆನಯ್ಯ  ? ಚಿಲ್ಲರೆ ಇಲ್ವಾ?"
"ಏನ್ ಸರ್ ಹಿಂಗೆ ಹೇಳ್ತಿರ? ಇವತ್ತಿನಿಂದ ಹಾಲು ಲಿಟರ್ ಗೆ ೩ ರು ದಾಸ್ತಿ ಆಗಿಲ್ವ? ನೀವು ಟಿ ವಿ ಲಿ ನೋಡಿಲ್ವಾ? "ಅಂತ ನನ್ನನ ಒಳ್ಳೆ ಹಳ್ಳಿ ಗಮಾರನಂತೆ ನೋಡಿದ.. 
"ಹೊವ್ದೆನಯ್ಯ ?ನಂಗೆ ಗೊತ್ತೇ ಇರಲಿಲ್ಲ.. ನಿಂದೆ ಚಾನ್ಸು ಬಿಡು ಹಾಲಿಗೆ ೩ ರು ಲಾಭ " 
"ಎಲ್ಲಿ ಲಾಭ ಸ್ವಾಮಿ, ನಮಗೆ ಬರುವ ಲಾಭ ಅಷ್ಟೇ, ಅದ್ಯೇನೋ ರೈತರಿಗೆ ಹೋಗುತ್ತಂತೆ"  
"ಹೌದ? ಒಳ್ಳೇದಪ್ಪ " ಅಂತ ೨ ಲಿಟರ್ ಹಾಲು ಹಾಕೊಂಡು ಹೊರಟೆ.. 
ಹೌದು ಇದ್ಯಾಕೆ ಇದ್ದಕ್ಕಿದ್ದ ಹಾಗೆ ಹಾಲಿನ ರೇಟು ಜಾಸ್ತಿ ಆಯ್ತು? ಹೆಂಗಪ್ಪ ಬದುಕು ಸಾಗಿಸೋದು ಅಂತ ಯೋಚಿಸುತ್ತ ಬಂದೆ.. ನಾವೇನೋ ೨೪ ರು ಕೊಟ್ಟು ಹಾಲು ತಗೊತೀವಿ,, ಆದ್ರೆ ಅದೇ ರೈತನಿಗೆ ಎಷ್ಟು ಕೊಡ್ತಾರೋ? ಅಂತ ಯೋಚಿಸುತ್ತ ಬಂದೆ..
ಒಬ್ಬ ಹಸುವನ್ನು ಕರೆದುಕೊಂಡು ಕೈಲ್ಲಿ ಒಂದು ಸ್ಟೀಲ್ ಬಕೆಟ್ ಹಿಡಿದು ಹೋಗುತ್ತಿದ್ದ.. ಸರಿ ಕೇಳೆ ಬಿಡೋಣ ಅಂತ ಅವನನ್ನ ತಡೆದೆ. 
" ಏನಪ್ಪಾ ಈ ಹಸು ತಗೊಂಡು ಎಲ್ಲಿ ಹೋಗ್ತಿದ್ದಿಯ? "
"ಇಲ್ಲೇ ಡೈರಿಗೆ ಸ್ವಾಮಿ" ಸರಿಯಾದ ವ್ಯಕ್ತಿಯೇ ಸಿಕ್ಕ ಅಂದುಕೊಂಡೆ..
"ಏನು ಹಸುವಿನ ಜೊತೆಗೆ ಹೊರಟಿದ್ದೀಯ !"
" ಹುಂ ಸ್ವಾಮಿ ಅಲ್ಲೇ ಹಾಲು ಕರೆದು ಅವರಿಗೆ ಕೊಡ್ತೀನಿ.. ಫ್ರೆಶ್ ಇರಬೇಕಲ್ಲ ಸರ್.. ನೀರು ಹಾಕ್ತಿವಿ ಅಂತ ಕಂಪ್ಲೈಂಟ್ ಮಾಡ್ತಾರೆ ಅದಕ್ಕೆ ಅಲ್ಲೇ ಕರೆದು ಕೊಡ್ತೀನಿ.."
" ಎಷ್ಟು ಕೊಡ್ತಾರೆ ಲಿಟರ್ ಗೆ?"
"ಈ ತಿಂಗಳವರೆಗೆ ೧೯ ರು ಕೊಡ್ತಾರಂತೆ.. ಮುಂದಿನ ತಿಂಗಳಿಂದ ೨೨ ಕೊಡ್ತಾರಂತೆ..ಸ್ವಲ್ಪ ಸಮಾಧಾನ.. ಹುಲ್ಲಿನ ಬೆಲೆ ಬೇರೆ ಜಾಸ್ತಿ.. ಪೆಟ್ರೋಲ್ ರೇಟು ಜಾಸ್ತಿ ಅಂತ ನಮ್ಮ ಗಾಡಿಯವ  ಜಾಸ್ತಿ ಮಾಡ್ಬಿಟ್ಟ..ಈಗ ಮುಂದಿನ ತಿಂಗಳಿಂದ ಸ್ವಲ್ಪ ಲಾಭ ಬರಬಹುದು "
ಅಂದ್ರೆ ಬರಿ ನಮಗೆ ಕೊಡುವ ಹಾಲಿಗೂ ರೈತನಿಗೆ ಸಿಗಿವ ಹಾಲಿಗೂ ಬರೀ ೨ ರು ವ್ಯತ್ಯಾಸ .!!! 
ಈ ೨ ರು ಯಿಂದ,, ರೈತ ಕೊಟ್ಟ ಹಾಲಿನ ಶೇಖರಣೆ, ಸಾಗಾಟ , ಸಂಸ್ಕರಣೆ, ಶಿತಲೀಕರಣ, packing , ಪುನಃ ಗ್ರಾಹಕರಿಗೆ ಸಾಗಾಟ , ಮತ್ತೆ ಮಾರಾಟ, ಅವರ commission , ಇವೆಲ್ಲ ಸಾಧ್ಯನ ಅನ್ನಿಸ್ತು.. ಆಮೇಲೆ ಗೊತ್ತಾಗಿದ್ದು ರೈತ ಕೊಟ್ಟ ಹಾಲಿನಿಂದ ಅನೇಕ ರಾಸಯನಿಕಗಲನ್ನ ಬಳಸಿ, ಅದರಲ್ಲಿರುವ ಕೊಬ್ಬು ಬೇರ್ಪಡಿಸಿ ನಮಗೆ ಮಾರುತ್ತಾರೆ.. ಅದೇ ರೀತಿ ಇನ್ನು ಏನೇನೊ ಬಳಸಿ ಹಾಲು ಮೊದಲಿನ ಗಿನವನ್ನೇ ಉಳಿಸಿಕೊಳ್ಳುವಂತೆ ಮಾಡುತ್ತಾರೆ ಅಂತ.. ಬೇರ್ಪಡಿಸಿದ ಕೊಬ್ಬಿನಿಂದ ಇತರೆ ಉಪ ಉತ್ಪನ್ನಗಳನ್ನ ಮಾಡಿ ಮಾರಾಟ ಮಾಡುತ್ತಾರೆ.. ಇದರಿಂದ ಸಂಸ್ತೆಗೆ ಒಳ್ಳೆ ಲಾಭ ಬರುತ್ತದೆ ಎಂದು..ಹಾಗೆಯೇ ಹೊರಟೆ..ನಾವು ಕೊಟ್ಟ ಹಣ ಎಷ್ಟು ಜನರ ಹೊಟ್ಟೆ  ತುಂಬಿಸುತ್ತದೆ..? ಹಾಲಿನವನು ಮತ್ತು ಅವನ ಸಂಸಾರ, ಹುಲ್ಲುಮಾರುವವನು ಮತ್ತು ಅವನ ಸಂಸಾರ, ಗಾಡಿಯವನು  ಮತ್ತು ಅವನ ಸಂಸಾರ, ಹಾಲು ದೈರಿಯವರು ಮತ್ತು ಅವರ  ಸಂಸಾರ,  ನಂದಿನಿ heritage ಗಳಲ್ಲಿ ಕೆಲಸಮಾಡುವ ಸಹಸ್ರಾರು ಜನ ಉದರಪೋಷಣೆ, ಇನ್ನು ಸ್ವಲ್ಪ ಮುಂದುವರೆದರೆ, ಅವರು ಆ ಹಣವನ್ನ ಪುನಃ ಯಾವುದೋ ಸಾಮಾನು ಖರೀದಿಗೋ ಉಪಯೋಗಿಸಿ ಅಲ್ಲಿಂದ ಸುತ್ತು ಹಾಕಿ ಪುನಃ ಇನ್ನೊಬ್ಬ ರೈತನ ಸಂಸಾರ ನಡೆಯುತ್ತದೆ.. ಒಂದು ಸಲ ಯೋಚನೆ ಮಾಡಿದರೆ ಇವೆಲ್ಲ ಹೇಗೆ ಸಾಧ್ಯ ಅನ್ನಿಸುತ್ತೆ.. ಹಣ  ಹೇಗೆಲ್ಲ ತಿರುಗುತ್ತದೆ ಎಂಬುದೇ ಸೋಜಿಗ.. ಹಾಗೆಯೇ ಇದು ನಮ್ಮ ಪರಿವೆಯೂ ಇಲ್ಲದೆ ನಡೆಯುತ್ತಿರುತ್ತದೆ ಎಂಬುದು ಇನ್ನು ವಿಸ್ಮಯ ..


ಇದೇ ರೀತಿ ನಾವು ವ್ಯಯಿಸುವ ಪ್ರತಿಯೊಂದಕ್ಕೂ ಇದೇರೀತಿ ಸಂಬಂದ ಸಿಗುತ್ತದೆ.. ಹಣ ಅಥವಾ ಲಕ್ಷ್ಮಿ ಯಾವುದೇ ಕಾರಣಕ್ಕೂ ಒಬ್ಬರ ಆಸ್ತಿಯಾಗಿರಲು ಬಯಸುವುದಿಲ್ಲ .. ಒಂದು  ಚಕ್ರವನ್ನ ಗಮನಿಸಿದರೆ ಲಕ್ಷ್ಮಿ ಹಲವು ವರ್ಗದವರ ಮನೆಗೆ ಭೇಟಿ ನೀಡುವುದನ್ನ  ಕಾಣುತ್ತೇವೆ.. 

ನಮಗೆ ಇನ್ನು ಒಂದು ವಿಚಿತ್ರ ಅಂದ್ರೆ, ನೀವು ಹಲವಾರು ಕಡೆ ಓಡಾಡುತ್ತಿರಿತ್ತಿರ.. ಹೋದಲ್ಲಿ ಬಂದಲ್ಲಿ ಹಲವಾರು ಕಂಪನಿ ಗಳ ಜಾಹೀರಾತು,  ಅವುಗಳ ಉತ್ಪನ್ನಗಳನ್ನ ನೋಡುತ್ತಿರ..ಇದರಿಂದ ನಾವೇನು ಕಳಕೊಳ್ಳುವುದು ಎಂದು ಯೋಚಿಸಬೇಡಿ.. ನೀವು ಅದೇ ಚಿತ್ರವನ್ನ ಹಲವಾರು ಬಾರಿ ನೋಡಿದಾಗ ಅದು ನಿಮ್ಮ ಮನದಲ್ಲಿ ಅಚ್ಚುಒತ್ತಿ ಉಳಿಯುತ್ತದೆ.. ನಿಮ್ಮ ಜೀವನದಲ್ಲಿ ಅಂತಹದ್ದೇ ಒಂದು ವಸ್ತು ಯಾವಾಗಲಾದರು ಬೇಕಾಗಬಹುದು.. ಅದನ್ನ ಖರೀದಿಗೆ  ನೀವು ಅಂಗಡಿಗೆ ಹೋಗುತ್ತಿರ.. ಆಗ ಅಲ್ಲ್ಲಿ ನಿಮಗೆ ನಿಮಗೆ ಹಲಾವು ಕಂಪನಿ ಗಳ ವಸ್ತು ಕಾಣಬಹುದು ಆದ್ರೆ ನೀ ವು ಖರೀದಿಸುವ ಸಾಧ್ಯತೆ ಇರುವುದು ನೀವು ದಿನಾ ನೋಡುತ್ತಿರುವ ಜಾಹಿರಾತಿನ ಕಾಮಪ್ನಿಯ ವಸ್ತು.. ಆ ಜಾಹಿರಾತಿನ ನೆನಪಾಗಿ ಆ ವಸ್ತುವನ್ನು ಕೊಂಡರೆ ಆ ಜಾಹೀರಾತು ಹಾಕಿದವನ ಶಾಮಕ್ಕೆ  ಪ್ರತಿಫಲ ಸಿಕ್ಕಂತೆ.. ಅದರಿಂದ ಅದರ ಲಾಭ ಅದರ ಮಾರಾಟಗಾರರು ಜಾಹೀರಾತುದಾರರು, ಕಂಪನಿ, ನೌಕರರು.. ಕೊನೆಗೆ ಆ ಕಚ್ಚಾ ವಸ್ತು ಬೆಳೆದ ರೈತ ಹೀಗೆ ಸಾಗುತ್ತದೆ.. ಇದರಿಂದ ಒಬ್ಬ ಒಂದು ಚಿತ್ರ ನೋಡಿದ ಮಾತ್ರಕ್ಕೆ ಅವನು ಅವನ ಹತ್ತಿರ ಇದ್ದ ಹಣವನ್ನ ಎಲ್ಲಿ ದುಡಿಯುತ್ತಿದ್ದ ರೈತನಿಗೆ ಅದು ತಲುಪುವಂತೆ ಮಾಡುತ್ತೇನೆ ಅನ್ನುವ ಕಲ್ಪನೆ ಕೂಡ ಬರಲು ಅಸಾಧ್ಯ..      


ಇಲ್ಲಿ ಒಂದನ್ನ ನಾವು ಗಮನಿಸಬೇಕು... ಹೆಚ್ಚಿನ ಎಲ್ಲ ಚಲನೆಯಲ್ಲೂ ರೈತನ ಪಾತ್ರ ಇರುವುದನ್ನ ನೋಡುತ್ತೇವೆ.. ಆದರೂ ನಮ್ಮ ರೈತರ ಬದುಕು ಯಾಕೆ ಹೀಗೆ ಆಗುತ್ತಿವೆ..? 
ಇದರಲ್ಲಿ ಹಲವರು ನ್ಯಾಯಸಮ್ಮತವಾಗಿ ವ್ಯವಹರಿಸಿದರೆ ಕೆಲವರು ಅಡ್ಡದಾರಿ ಹಿಡಿಯುತ್ತಾರೆ.. ಬಲು ಬೇಗ ಶ್ರೀಮಂತರಾಗುವ ದುರಾಸೆ ಅವರಲ್ಲಿ ಇರುತ್ತದೆ.. ಯಾರು ಏನೆ ಸಂಪಾದಿಸಿದರೂ ಅದು ಯಾವುದೋ ಒಂದು ರೂಪದಲ್ಲಿ ಬೇರೆಯವರ ಕೈ ಸೇರಲೇ ಬೇಕು ಅಲ್ವ..? 




Sunday, January 29, 2012

ನನ್ನ ಮಗನ ಶಾಲೆಯ ಸ್ಕೂಲ್ ಡೇ ವೀಡಿಯೊ

ನನ್ನ ಮಗ ಶಶಾಂಕ ನ ಶಾಲೆಯ ಸ್ಕೂಲ್ ಡೇ ಕಾರ್ಯಕ್ರಮದಲ್ಲಿ ಅವನ ನೃತ್ಯವಿತ್ತು.. ಅದರ ಸಣ್ಣ tunuku   ಇಲ್ಲಿದೆ..

Wednesday, January 25, 2012

ಗಣರಾಜ್ಯೋತ್ಸವ...

ಜನವರಿ ೨೬ ಬಂದ್ರೆ ಸಾಕು ನಮಗೆ ಎಲ್ಲಿಲ್ಲದ ಸಡಗರ. ನಮಗೆ ಚೌತಿ ಹಬ್ಬವೂ ಒಂದೇ ಜನವರಿ ೨೬ ಒಂದೇ.. ಹೌದು.. ನಾವು ಓದುತ್ತಿದ್ದುದು ಒಂದು ಹಳ್ಳಿಯ ಕನ್ನಡ ಪ್ರಾಥಮಿಕ ಶಾಲೆ. ನಮ್ಮ ಮನೆಯಿಂದ ಸುಮಾರು ೧ ಕಿ ಮಿ ದೂರ.. ಮಾರುಕೇರಿ ಎಂಬ ಗ್ರಾಮ.. ಅಲ್ಲಿ ೭ ನೆ ತರಗತಿ ವರೆಗೆ ವ್ಯಾಸಾಂಗ ಮಾಡಬಹುದಿತ್ತು.. ಅದರ ನಂತರ ಹೈ ಸ್ಚೂಲ್ಗೆ ಹೋಗಬೇಕಿತ್ತು..

ಜನವರಿ ೨೫ ರ ಮಧ್ಯಾನ್ಹವೇ ಶಾಲೆಗೇ ಹೆಚ್ಚು ಕಡಿಮೆ ರಜೆ ಲೆಕ್ಕ.. ಪಾಠ ಇರುತ್ತಿರಲಿಲ್ಲ.. ಶಾಲೆಯನ್ನ ತಳಿರು ತೋರಣಗಳಿಂದ ಸಿಂಗರಿಸಬೇಕು ಎನ್ನುವ ಉತ್ಸಾಹ..  ಮಧ್ಯಾನ್ಹ ಮನೆಗೆ ಬಂದು ಊಟ ಮುಗಿಸಿ ಓದುತ್ತಿದ್ದೆವು.. ೬-೭ ಜನರ ಗುಂಪು ಮಾಡಿಕೊಂಡು ಯಾರ್ಯಾರದ್ದೋ ಮನೆ ತೋಟ, ಹಳ್ಳ, ಬೇಲಿ ಎಲ್ಲ ಕಡೆ ಸುತ್ತಿ ಒಂದಿಷ್ಟು ಅಲಂಕಾರಿಕ ಗಿಡಗಳು, ತೇರು ಹೂವು, ಬಣ್ಣ ಬಣ್ಣದ ಎಲೆಗಳಿರುವ ಗಿಡಗಳಲ ಕೊಂಬೆಗಳನ್ನ ಮುರಿದು ತರ್ತಾ ಇದ್ದೆವು.. ಅದನ್ನೆಲ್ಲ ಒಂದು ಮಾಲೆ ತರಹ ಮಾಡಿ ಶಾಲೆಯ ಸುತ್ತೆಲ್ಲ ಕಟ್ಟುತ್ತಿದ್ದೆವು..ಅಂತೂ ಸಾಯಂಕಾಲ ೬-೭ ಗಂಟೆವರೆಗೆ ಎಲ್ಲ ತಯಾರು ಮಾಡಿ ಮನೆಗೆ ಹೋಗ್ತಾ ಇದ್ವಿ. ಮನೆಗೆ ಹೋದರೆ ನಾಳೆ ಗಣರಯೋತ್ಸವದ್ದೆ ಚಿಂತೆ.ಇದೆ ಗುಂಗಿನಲ್ಲೇ ಮಲ್ಗಿರುತ್ತಿದ್ವಿ.
 
ಬೆಳಗಾಗೆದ್ದು ಬೇಗ ತಯಾರಾಗಿ ೬.೩೦ ಕ್ಕೆಲ್ಲ ಶಾಲೆಯಲ್ಲಿ ಹಾಜರ್..  ಬರುವಾಗ ಹೂವುಗಳು, ವಿಶೇಷವಾಗಿ ಧ್ವಜದ ಕಟ್ಟೆ
ಅಲಂಕಾರಕ್ಕೆ, ಯೆಜ್ಲು ಅಂತ ಒಂದು ಮರದ ಹೂವು , ಮತ್ತೆ ಬಾವುಟದ ಒಳಗೆ ಹಾಕಲಿಕ್ಕೋ ಹೂವುಗಲನ್ನ ತರ್ತ ಇದ್ವಿ. ಸುಮಾರು ಹುಡುಗರು ತಬ್ದ ಹೂವುಗಳನ್ನ ಸುಂದರವಾಗಿ ಧ್ವಜದ ಕಟ್ಟೆಯನ್ನ ಅಲಂಕರಿಸಿ, ಧ್ವಜದ ಒಳಗೆ ಹೂವು ಹಾಕಿ ಅದನ್ನ ಕಟ್ಟುವ ರೀತಿ ಕಟ್ಟಿ ಮೇಲಕ್ಕೆ ಕಟ್ಟುತ್ತಿದ್ದೆವು.. ಇದೆಲ್ಲ ನಮ್ಮ ಮಾಸ್ತರರ, ಅಕ್ಕೋರ ಸಮ್ಮುಖದಲ್ಲೇ ನಡೀತಿತ್ತು.. ನಮಗೆ ಶಾಸ್ತ್ರಿ ಮಾಸ್ತರರು(ಈಗ ಇಲ್ಲ, ಸ್ವರ್ಗಸ್ತರಾಗಿದ್ದಾರೆ) , ಗಿರಿಜಾ ಅಕ್ಕೋರು, ಜಯಲಕ್ಷ್ಮಿ ಅಕ್ಕೋರು.. ಇವರ ಉಪಸ್ತಿತಿಯಲ್ಲಿ ನಡೀತಿತ್ತು.. ಕಾರ್ಯಕ್ರಮಕ್ಕೆ ಒಬ್ಬರು ಅಧ್ಯಕ್ಷರು ಬೇಕಲ್ಲ .. ಅದಕ್ಕಾಗಿ ನಮ್ಮ ನೆರೆಮನೆಯವರಾದ ಟಿ ಎಸ ಭಟ್ಟರೇ  ನಮ್ಮ ಶಾಲೆಯ ಖಾಯಂ ಅಧ್ಯಕ್ಷರು.. ಅಂತೂ ೭:೩೦ ಅ ಸುಮಾರಿಗೆ ಅಧ್ಯಕ್ಷರಿಂದ ಧ್ವಜಾರೋಹಣ, ಆಮೇಲೆ ಜನಗಣ ಮನ, ನಮ್ಮ ಶಾಸ್ತ್ರೀ ಮಾಸ್ತರರಿಂದ ಪ್ರಾಸ್ತಾವಿಕ ಮಾತು, ಆಮೇಲೆ ಅಧ್ಯಕ್ಷರಿಂದ ನಾಲ್ಕಾರು ಹಿತವಚನಗಳು, .. ಅದು ಮುಗಿದ ಮೇಲೆ ಮಕ್ಕಳು ಯಾರದ್ರೂ ಭಾಷಣ ಮಾಡುವವರಿದ್ದರೆ ಅವರ ಭಾಷಣ.. ನಾನೂ ಸಾಧಾರಣವಾಗಿ ಭಾಷಣ ಮಾಡುತ್ತಿದ್ದೆ.. ಆದ್ರೆ ಆ ಸಲ  ನನಗೆ ನನ್ನ ಅಪ್ಪಚ್ಚಿ ಎಲ್ಲ ಸೇರಿ " ಹೇ ಏನಂತ ಕನ್ನಡದಲ್ಲಿ ಭಾಷಣ ಮಾಡ್ತ್ಯ? ಇಂಗ್ಲಿಷ್ ನಲ್ಲಿ ಭಾಷಣ ಮಾಡವ" ಹೇಳಿ ಒಂದು ಪೇಜು ಇಂಗ್ಲಿಷ್ ಭಾಷಣ ಬರೆದು ಕೊಟ್ರು.. ನಾನೂ ಸುಮಾರು ಒಂದು ವಾರದಿಂದ ಬಾಯಿಪಾಠ ಮಾಡಿ ತಯಾರಾದೆ.. ಸರಿ ಇನ್ನೇನು ಭಾಷಣದಲ್ಲಿ ನನ್ನ ಹೆಸರೂ ಇತ್ತು.. ಶಾಸ್ತ್ರಿ ಮಾಸ್ತರರು ನನ್  ಕರೆದರು,.. ನನಗೆ ಭಯ.. ಅದರೂ ಹೆಂಗೋ ಹೋಗಿ  ನಿಂತು ಶುರು ಮಾಡ್ಕಂಡೆ.. ಎಲ್ಲರಿಗೂ ನಾ ಏನು ಹೇಳ್ತಾ ಇದ್ದೇನೆ ಅಂತಾನೆ ಅರ್ಥ ಆಗಿಲ್ಲ (ನಂಗೂ ಸಹ). ನಮ್ಮ ಅಧ್ಯಕ್ಷರು ಏನೋ ಹೇಳ್ತಿದ್ದರು.. ಅದು ನನ್ನ ಕಂಠ ಪಾಠ ಕ್ಕೆ ತೊಂದ್ರೆ ಆಯ್ತು.. ಏನು ಅಂತ ಕೇಳಿದೆ.. ಏನಿಲ್ಲ ನೀ ಮುಂದುವರೆಸ ಅಂದ್ರು.. ಸರಿ ಶುರು ಮಾಡಿದ ಮೇಲೆ ಮುಗಿಸಬೇಕಲ್ಲ.. ಪುನಃ ಮೊದಲಿನಿಂದ ಶುರು ಮಾಡಿ, ಮುಗಿಸಿದೆ.. ಯಾರಿಗೆ ಏನು ಅರ್ಥ ಆಯ್ತೋ ಗೊತ್ತಿಲ್ಲ.. ಅಂತೂ ಒಂದಿಸ್ತು ಚಪ್ಪಾಳೆ ಬಂತು..  ಕೊನೆಗೆ ಒಂದು ಸಣ್ಣ ವಂದನಾರ್ಪಣೆ., ಅದೇ ಸಮಯಕ್ಕೆ ನಮಗೆಲ್ಲ ಚಾಕಲೇಟ್ ಹಂಚಿದರು.. 
ಮುಂದಿನದೇ ಪ್ರಭಾತ್ ಪೇರಿ.. ಎಲ್ಲ ಸಾಲಾಗಿ ರಸ್ತೆಯ ಇಕ್ಕೆಡೆಗಳಲ್ಲಿ, ಒಂದು ಸಾಲಿನಲ್ಲಿ ಹುಡುಗರೂ ಇನ್ನೊಂದು ಸಾಲಿನಲ್ಲಿ ಹುಡುಗಿಯರೂ ನಿಂತು ಅದಕ್ಕೆ ಮುಂದಾಳಾಗಿ ನಮ್ಮ ಶಾಸ್ತ್ರಿ ಮಾಸ್ತರರು ಇರ್ತಿದ್ರು.. ನಮ್ಮ ಯಾತ್ರೆ ಅಲ್ಲಿಂದ ಸುಮಾರು ೧ ಕಿ ಮಿ  ದೂರದ ಗುಡ್ಡೆ ಕಟ್ಟೆ ವರೆಗೆ ನಡೀತಿತ್ತು.. ಸರಿ,, " ಬ್ಹೊಲೋ ಭಾರತ್ ಮಾತಾಕಿ,""ಸುಭಾಶ್ ಚಂದ್ರ ಭೋಸ್ ಕಿ" ಮಾಹಾತ್ಮ ಗಾಂಧೀಜಿ ಕಿ "  ಜೈಕಾರ ದೊಂದಿಗೆ ನಮ್ಮ ಪೇರಿ ಹೊರಟಿತು.. ಮೊದಲು ಬರುತ್ತಿದ್ದುದು  ವಾಸು ಅಂಗಡಿ.. ಅವರು ಎಲ್ಲ ಮಕ್ಕಳಿಗೂ ಒಂದೊಂದು  ಪೆಪ್ಪರ್ ಮೆಂಟ್ ಕೊಡ್ತಿದ್ದರು.. ಅಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ.. ಆಮೇಲೆ ನನ್ನ ಚಿಕ್ಕಪ್ಪನ ಅಂಗಡಿ ಅವನೂ ಸಹ ಎಲ್ಲರಿಗೂ  ಲಿಂಬೆ chocolete ಕೊಡುವ  ಸಂಪ್ರದಾಯ ಇಟ್ಟುಕೊಂಡಿದ್ದ.. ಅದನ್ನ ಸ್ವಾಹ ಮಾಡಿ ಗುಡ್ಡೆ ಕಟ್ಟೆ ವರೆಗೆ ಭೇಟಿ ನೀಡು ಅಲ್ಲಿಂದ ವಾಪಸ್ ಬರ್ತಿದ್ವಿ.. ಕೊನೆಗೆ ಶಾಲೆಗೇ ಬಂದು ಅಲ್ಲಿಗೆ ಕಾರ್ಯಕ್ರಮ ಮುಕ್ತಾಯವಾಗ್ತಿತ್ತು .. ಬಳಲಿಬೆನ್ದಗ್ತಾ ಇದ್ವಿ.. ಹಲವರು ಮಧ್ಯದಲ್ಲೇ ನಾಪತ್ತೆ..
ಇದು ನಮ್ಮ ಗಣರಾಜ್ಯೋತ್ಸವದ ಸಂಭ್ರಮ .. ಅದು  ಯಾಕೋ ಗೊತ್ತಿಲ್ಲ.. ಗಣರಾಜ್ಯೋತ್ಸವದಂದು ಚಕ್ಕ ಮಕ್ಕಳನ್ನು ನೋಡಿದಾಗಲೆಲ್ಲ ನಾವು ಆಚರಿಸಿದ ಗಣರಾಜ್ಯೋತ್ಸವದ ನೆನಪಾಗುತ್ತಿದೆ.. 

 
ಜೈ ಹಿಂದ್

Friday, January 20, 2012

ಕನಸುಗಳು

ನನ್ನ ಸಹೋದ್ಯೋಗಿ ಇಂದು ಯಾಕೋ ನನ್ನ ವಿರುದ್ಧ ವಿನಾ ಕಾರಣ ರೇಗಾಡಿದ್ದ. ನಾನೂ ತುಂಬಾ ಹುಡುಕಾಡಿದೆ ನನ್ನ ತಪ್ಪಿಗಾಗಿ.. ಏನೋ ಸಣ್ಣ ಪುಟ್ಟ ತಪ್ಪುಗಳು ಕಾಣಿಸಿದವು .. ಆದ್ರೆ ಅದರಲ್ಲಿ ನನ್ನ ಪಾತ್ರ ಏನೂ ಇರಲಿಲ್ಲ.. ಅಂದು ನನ್ನ ಮನಸ್ಸಿಗೆ ತುಂಬಾ ನೋವು, ಬೇಸರ ಆಗಿತ್ತು.. ಅದೇ ಆಲೋಚನೆಯಲ್ಲೇ ಗಾಡಿ ಓಡಿಸಿಕೊಂಡು ಮನೆಗೆ ಬಂದೆ. ಹೆಂಡತಿ ಮಕ್ಕಳ ಜೊತೆ ಮಾತನಾಡುವ ಮನಸ್ಸಿರಲಿಲ್ಲ.. ಸುಮ್ಮ ಸುಮ್ಮನೆ ರೇಗುತ್ತಿದ್ದೆ.. ಪಾಪ ನನ್ನ ಮಗನೂ ಸಹ ಸಾಮಾನ್ಯ ಕಾರಣಕ್ಕೆ ಪೆಟ್ಟು ತಿಂದು ಅತ್ತ. ನನಗೆ ತುಂಬಾ ಸಂಕಟವಾಯಿತು.. ರಾತ್ರೆ ಎಲ್ಲ ಇದೇ ವಿಚಾರವಾಗಿ  ಬೇಸರಗೊಂಡು  ಮಲಗಿದ್ದೆ.. ತುಂಬಾ ಹೊತ್ತಾದರೂ ನಿದ್ದೆ ಬಂದಿಲ್ಲ.. ಕಣ್ಣು ಮುಚ್ಚಿದರೆ ಅದೇ ಯೋಚನೆ.. ಹೀಗೆ ಮಾಡಬಹುದಿತ್ತು.. ಹಾಂಗೆ  ಮಾಡಬಹುದಿತ್ತು.. ಎಂಬೆಲ್ಲ ಯೋಚನೆಗಳು.. ನಾಳೆ ಕಚೇರಿಗೆ ಹೋಗಬೇಕೆಂಬ ಜಾಗ್ರತ ಪ್ರಜ್ಞೆ ಇದ್ದರೂ ನಿದ್ದೆ ಮಾತ್ರ ಹತ್ತಿರ ಸುಳಿಯುತ್ತಿರಲಿಲ್ಲ . ಯಾಕೆ ಹೀಗೆ..? ಮನುಷ್ಯರು ಯಾಕೆ ಈರೀತಿ ವರ್ತಿಸುತ್ತಾರೆ..? ಎಂಬಿತ್ಯಾದಿ..
ಅದು ಯಾವಾಗ ನಿದ್ರೆ ಬಂತೋ ತಿಳಿಯಲಿಲ್ಲ.. ಬೆಳಿಗ್ಗೆ ಮಾಮೂಲಿ ಸಮಯದಲ್ಲೇ ಎಚ್ಚರ ಆಯ್ತು.. ಏನೋ ಕನಸು ಬಿದ್ದ ನೆನಪು.. ಯಾವ ಕನಸು ಎಂದು ಯೋಚನೆ ಮಾಡಿದರೂ ನೆನಪಿಗೆ ಬರಲಿಲ್ಲ.. ಸರಿ, ದಿನನಿತ್ಯದ ಕೆಲಸ ಮುಗಿಸಿ ಕಚೇರಿಯ ಕಡೆ ಮುಖ ಮಾಡಿದಾಗ ನಿನ್ನೆಯ ಘಟನೆ ನೆನಪಾಯ್ತು.. ಅದರ ಜೊತೆಗೆ ನಿನ್ನೆ ಬಿದ್ದ ಕನಸೂ ಅಲ್ಪ ಸ್ವಲ್ಪ ನೆನಪಾಯ್ತು.. ಅದು ನಿನ್ನ ನಡೆದ ಘಟನೆಗೆ ತೀರ ಹತ್ತಿರವಾಗಿತ್ತು.. ಆದರೆ ಸ್ತಳ ಪ್ರದೇಶ ಎರಡೂ ಬೇರೆ, ಅಷ್ಟೇ ಅಲ್ಲದೆ ಇನ್ನೂ  ಯಾರ್ಯಾರೋ ಇದ್ರೂ.. ಇದೆಲ್ಲ ಯೋಚಿಸಿದಾಗ ನನಗೆ ನಮ್ಮ ಮನಸ್ಸಿನ ಕಾರ್ಯವೈಖರಿ ಬಗ್ಗೆ ಕುತೂಹಲ ಜಾಸ್ತಿಯಾಯ್ತು.. ಈ ಕನಸುಗಳು ಯಾಕೆ ಬೀಳುತ್ತವೆ? ಅದಕ್ಕೂ ದೈನಂದಿನ ಜೀವನಕ್ಕೋ ಎಷ್ಟರ ಮಟ್ಟಿಗೆ ಸಂಬಂಧ.. ಜಾಗ್ರತ ಮನಸ್ಸು.. ಸುಪ್ತ ಮನಸ್ಸು.. ಇವುಗಳ ಬಗ್ಗೆ ಯೋಚಿಸತೊಡಗಿದೆ..
ಮುಖ್ಯವಾಗಿ ಕನಸು ಯಾತಕ್ಕೆ ಬೀಳುತ್ತವೆ..? ನಾವು ನಿದ್ರಾ ಸ್ತಿತಿಯಲ್ಲಿರುವಾಗ ನಮ್ಮ ಒಳಮನಸ್ಸಿನ ಆಲೋಚನೆಗಳೇ ಕನಸುಗಳು.. ಇದು ಕಥೆ, ಅಥವಾ ಹಳೆಯ ನೆನಪುಗಲೋ  ಅಥವಾ ಮುಂದೆ ಆಗುವ ಘಟನೆಗಳೂ ಇರುತ್ತವೆ.. ಇದು ಕೆಲವು ಸಲ ಮುದ ನೀಡಿದರೆ ಬಹುತೀಕ ಸಲ ಕಹಿ ಯಾಗಿರುತ್ತವೆ.. ಇನ್ನು ಅನಾರೋಗ್ಯ ಕಾಲದಲ್ಲಿ ಮನಸ್ಸು ದುರ್ಬಲ ವಾಗಿರುವ ಕಾರಣ, ಬೀಳುವ ಕನಸುಗಳು ಬಹುತೇಕ ಕೆಟ್ಟದ್ದಿರುತ್ತದೆ..
ಇನ್ನು ನಾವು ಗಾಡಿ ಓಡಿಸುವಾಗ ನಮ್ಮಲ್ಲಿ ಎಷ್ಟು ಜನ ನಮ್ಮ ಸಂಪೂರ್ಣ ಗಮನವನ್ನ ರಸ್ತೆಯ ಮೇಲೆ ಇತ್ತು ಗಾಡಿ ಓಡಿಸುತ್ತೇವೆ..? ಬಹುಶಃ ಹೊಸಬರು ಮಾತ್ರ.. ಹೆಚ್ಚಿನವರು ಬೇರೆ ಏನೋ ಯೋಚನೆ ಮಾಡುತ್ತಿರುತ್ತಾರೆ.. ಇದು ಸಾಮಾನ್ಯ.. ಆದ್ರೆ ಸಿಗ್ನಲ್ ಬಂದಾಕ್ಷಣ ನಮ್ಮ ಗಾಡಿ ನಿಲ್ಲುತ್ತದೆ,, ಬಿಟ್ಟ ತಕ್ಷಣ ಓಡುತ್ತದೆ.. ಅಡ್ಡಬಂದರೆ ಬ್ರೇಕ್ ಬೀಳುತ್ತದೆ.. ಖಾಲಿ ರಸ್ತೆ ಬಂದರೆ ವೇಗ ಜಾಸ್ತಿ ಆಗುತ್ತದೆ.. ಹೀಗೆ ಎಲ್ಲವೂ ನಾವು ತಿಳಿದು ಮನವರಿಕೆ ಮಾಡಿಕೊಂಡು ಮಾಡುವುದಲ್ಲ.. ಹಾಗಿದ್ದರೆ ಇದು ಹೇಗೆ? ಇದು ಯಾವುದರಿಂದ ನಿಯಂತ್ರಿಸಲ್ಪಡುತ್ತದೆ..? ಅಂದ್ರೆ ಇದು ಬಹುಶ ನಮ್ಮ ತಾತ್ಕಾಲಿಕ ಮನಸ್ಸಿನಲ್ಲಿ ನಡೆಯುವ ನಿತ್ಯ ಕ್ರಿಯೆಗಳು..  ಇದೂ ಒಂದು ರೀತಿ  ಹಗಲುಗನಸೇ?


ಮನಸ್ಸಿನ ಕಾರ್ಯ ವೈಖರಿ ಎಷ್ಟು ವಿಚಿತ್ರ?  ಒಬ್ಬಂಟಿಯಾಗಿದ್ದಾಗ ನಮ್ಮಸ್ತಕ್ಕೆ ನಾವೇ ಏನೇನೊ ಆಲೋಚಿಸುತ್ತಿರುತ್ತೇವೆ.. ನಮ್ಮ ಅವಯವಗಳೂ ಅದಕ್ಕೆ ಸರಿಯಾಗಿ ಸ್ಪಂದಿಸುತ್ತಿರುತ್ತವೆ.. ಅದೇ ಬೇರೆ ಯಾರಾದರೂ ಆ ಸಮಯದಲ್ಲಿ ಬಂದರೆ ತಕ್ಷಣ ನಿಂತು ಹೋಗುತ್ತವೆ..

ಎಷ್ಟು ವಿಚಿತ್ರ ಈ ಕನಸುಗಳು..?